ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

09 November 2009

ಕಳ್ಳ ಮನಸ್ಸು...!

ಸೋಮಾರಿ ತನವೆಂಬುದು ಹೆಗಲೇರಿ ಕುಳಿತುಬಿಟ್ಟಿತೆಂದರೆ ಮನಸ್ಸು ಕಳ್ಳ ಬೀಳಲಾರಂಭಿಸುತ್ತದೆ. ತಪ್ಪಿಸಿಕೊಳ್ಳಲೆತ್ನಿಸುವ ಮನಸ್ಸಿಗೆ ಸಿಗುವ ಕಳ್ಳದಾರಿಗಳೇ ಅನೇಕ. ಅದರಲ್ಲೂ ಈ ಬರೆಯುವ ವಿಚಾರದಲ್ಲಂತೂ ತಪ್ಪಿಸಿಕೊಳ್ಳಲು ಮನಸ್ಸು ಹುಡುಕುವ ನೆವಗಳು ಅಷ್ಟಿಷ್ಟಲ್ಲ. ಮೊದಮೊದಲು ನೆಲದ ಮೇಲೆ ಕುಳಿತು ಮೊಣಕೈಮಂಡಿಯೂರಿ ಕುಳಿತು ಬರೆಯತೊಡಗಿದಾಗ 'ಛೇ ಒಂದು ಟೇಬಲ್ಲು ಅಂತ ಇದ್ರೆ ಇನ್ನೂ ಹೆಚ್ಚಾಗಿ, ಬಹಳ ಹೊತ್ತು ಬರೆಯಬಹುದು' ಅನಿಸುತ್ತದೆ. ಅದೂ ಆಯ್ತು ಟೇಬಲ್ಲೂ ಬಂತು ಹೊಂದಿಕೆಯಾಗುವ ಕುರ್ಚಿಯೂ ಅಣಿಯಾಗುತ್ತೆ. ಆದರೆ ಮನಸು ಬರವಣಿಗೆಯಲ್ಲಿ ತೊಡಗಿತಾ ಹುಹುಂ ಹೀಗೆ ಕೈಯಲ್ಲಿ ಬರೆದು ಮತ್ತೆ ಕಂಪ್ಯೂಟರ್ ನಲ್ಲಿ ಟೈಪಿಸುವುದಕ್ಕಿಂತ ನೇರವಾಗಿ ಕಂಪ್ಯೂಟರ್ ಎದುರಿಗೇ ಕುಳಿತು ಯೋಚನೆಗಳನ್ನೆಲ್ಲಾ ಹಾಗೇ ಹಸಿಹಸಿಯಾಗಿ ಅಚ್ಚಿಸಬಹುದಲ್ಲಾ ಅಂತ ಯೋಚಿಸುತ್ತದೆ. ಇನ್ನು ಎಲ್ಲವೂ ಸರಿಯಾಗಿವೆ ಎಂದಿಟ್ಟುಕೊಂಡರೆ 'ಛೇ ಇವತ್ತು ಬೇಡ ಭಾನುವಾರ ಇಡೀ ದಿನ ರಜೆ ಇದೆಯಲ್ವಾ, ಅವತ್ತು ಬರೆಯೋಣ' ಎಂದು ಜಾರಿಕೊಳ್ಳುತ್ತದೆ. ಹೋಗಲಿ ಆ ಭಾನುವಾರವಾದರೂ ಬರೆಯಲು ತೊಡಗೀತಾ ಅಂದುಕೊಂಡರೆ 'ವಾರದಿಂದ ಬಾಕಿ ಉಳಿದ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು, ಒಂದು ಚಿಕ್ಕ ನಿದ್ರೆ ಮಾಡಿ ಕೂತು ಬಿಡೋಣ' ಎಂದು ತಪ್ಪಿಸಿಕೊಳ್ಳುತ್ತೆ. ಅಷ್ಟರಲ್ಲಿ ಸಂಜೆ ಆಗುತ್ತೆ, ನಾಳೆಯ ಕೆಲಸಕಾರ್ಯಗಳು ನೆನಪಾಗಿ ಮನಸ್ಸು ಆ ಕಡೆ ಹೊರಳುತ್ತೆ. ಹೀಗೆ ಮನಸ್ಸು ಇಲ್ಲದ್ದನ್ನು ಹುಡುಕುತ್ತಾ, ದಿನಗಳನ್ನು ಕಳೆಯುತ್ತಾ ವ್ಯಕ್ತಿತ್ವವನ್ನೇ ನಿಷ್ಪ್ರಯೋಜಕ ಗೊಳಿಸುತ್ತದೆ. ಇನ್ನು ಹಬ್ಬ-ಹರಿದಿನಗಳು ಬಂದರಂತೂ ಮುಗಿಯಿತು. ಊರಿಗೋಗಿ ಹಬ್ಬದ ಸಡಗರ ಮುಗಿಸಿ ಬರುವವರೆಗೂ ಮನಸ್ಸು ಒಂದಕ್ಷರ ಬರೆಯಲೂ ಮುಂದಾಗುವುದಿಲ್ಲ. ಹೀಗಾಗಿ ಒಮ್ಮೆ ಮನಸ್ಸಿಗೆ ಹೊಳೆದ ಒಂದು ವಿಚಾರ ಎಷ್ಟೋ ದಿನಗಳ ನಂತರ ಕೃತಿರೂಪಕ್ಕೆ ಇಳಿಯುತ್ತದೆ. ಇನ್ನೂ ಕೆಲವು ಮನಸಿನಲ್ಲೇ ಸತ್ತು ಮಲಗುತ್ತವೆ.

ನನಗೂ ಹೀಗೇ ಆಯ್ತು
ಇತ್ತೀಚೆಗೆ ಯಥೇಚ್ಚವಾಗಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಉತ್ತರ ಕರ್ನಾಕದ ಬಹುಪಾಲು ಹಳ್ಳಿಗಳು ನೆರೆಯಲ್ಲಿ ಕೊಚ್ಚಿಹೋಗಿ ಹಳ್ಳಿಗೆ ಹಳ್ಳಿಗಳೇ ನಾಶವಾಗಿ ಹೋದಾಗ, ಇಡೀ ಕರ್ನಾಕದ ಜನತೆಯೇ ಅತೀವ ಮಾನವೀಯತೆಯಿಂದ ನೆರೆಯ ಸಂತ್ರಸ್ತರ ನೆರವಿಗೆ ನಿಂತಾಗ. ಬ್ಲಾಗ್ ನಲ್ಲಿ ಹಾಕಲು ಒಂದು ಲೇಖನ ಬರೆಯಬೇಕೆಂದು ಕೊಂಡೆ ಅರ್ಧಂಬರ್ಧ ಬರೆದಿಟ್ಟೆ ಕೂಡಾ. ಅಷ್ಟರಲ್ಲಿ ದೀಪಾವಳಿ ಬಂತು ಊರಿಗೆ ಹೋಗುವ ಸಡಗರ. ಊರಿಂದ ಬಂದು ಪ್ರಕಟಿಸೋಣ ಅಂತಿದ್ದೆ. ಅಷ್ಟರಲ್ಲಿ ನೆರೆ ಇಳಿದಿತ್ತು. ನನ್ನ ಲೇಖನ ಅದರ ಅರ್ಥವನ್ನೂ ಕಳೆದುಕೊಂಡಿತ್ತು.
ತಿಂಗಳು ಕಳೆಯುತ್ತಾ ಬಂದರೂ ಬ್ಲಾಗ್ ಅಪ್ ಡೇಟ್ ಮಾಡದೇ ತಪ್ಪಿಸಿಕೊಳ್ಳುತ್ತಿರುವ ಬಗ್ಗೆ. ಕಾರಣ ಹೇಳಲಿಕ್ಕಾಗದೇ ಇಷ್ಟೆಲ್ಲಾ ಬರೆಯ ಬೇಕಾಯಿತು.

ಪರ್ಶು..,

0 comments:

Post a Comment