ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

03 November 2010

:: ಜಾತಿ ಮತ್ತು ಹೆಸರು ::


(ದಿನಾಂಕ: 27/10/2010 ರ 'ಸಾರ್ಥ' ದಲ್ಲಿ   ಪ್ರಕಟವಾದ "ಜಾತಿ ಪದ್ದತಿ : ರೇವಪ್ಪನ ಅವಲೋಕನ"ಲೇಖನಕ್ಕೆ ಅನಿಸಿಕೆಯಾಗಿ ಬರೆದ ಬರಹ)

ಜಾತಿ ಯಂತಹ ಸೂಕ್ಷ್ಮ ವಿಚಾರದ ಬಗ್ಗೆ ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು. ಎಲ್ಲೇ ಸ್ವಲ್ಪ ಎಚ್ಚರ ತಪ್ಪಿದರೂ ಯಾರನ್ನೋ ಉದ್ದೇಶಪೂರ್ವಕವಾಗಿ ಆಡಿಕೊಂಡಂತಾಗಿ ಬಿಡುತ್ತದೆ ಉದ್ದೇಶ ನನಗೆ ಖಂಡಿತಾ ಇಲ್ಲ ಎನ್ನುತ್ತಲೇ ...

ನಮ್ಮ ಹಿಂದೂಧರ್ಮದಲ್ಲಿ ವೃತ್ತಿ ದ್ಯೂತಕವಾಗಿ ರೂಪುಗೊಂಡ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಚತುರ್ವರ್ಣಗಳು ಕಾಲಾನಂತರದಲ್ಲಿ ಜಾತಿ ಗಳಾಗಿ ಮಾರ್ಪಾಟುಗೊಂಡವು ಎನ್ನಲಾಗುತ್ತಿದೆ. ನಾಲ್ಕು ವರ್ಣಗಳಲ್ಲೇ ಕ್ರಮೇಣವಾಗಿ ಒಂದೊಂದರಲ್ಲೇ ಹಲವಾರು ಒಳಪಂಗಡಗಳು, ಉಪಜಾತಿಗಳು ಸೃಷ್ಟಿಯಾದವು. ಒಂದು ವರ್ಣದೊಳಗಿನ ವಿಂಗಡನೆಗೆ, ಜಾತಿ-ಉಪಜಾತಿಗಳ ಸೃಷ್ಠಿಗೆ ಇನ್ನೊಂದು ವರ್ಣ ನೇರವಾಗಿ ಕಾರಣವಾಗಿಲ್ಲದೇ ಇರಬಹುದು ಆದರೆ ಒಂದು ವರ್ಣದ ಜನತೆ ಅದೇ ವರ್ಣದಲ್ಲೇ ಜೀವನ ಸವೆಸಲು ಮತ್ತು ಗಡಿದಾಟಿ ಬಾರದಂತೆ ಕಾಯ್ದುಕೊಳ್ಳಲು ಇನ್ನೊಂದು ವರ್ಣ ಸದಾ ಜಾಗೃತವಾಗಿತ್ತು ಎನ್ನಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಶೂದ್ರನು ಶೂದ್ರನಾಗೇ ಇರಬೇಕೆಂಬುದು ಬ್ರಾಹ್ನಣ ವರ್ಣದ ಅಪೇಕ್ಷೆಯಾಗಿತ್ತು. ಅವರನ್ನು ಹಾಗೇ ಇರಿಸುವಲ್ಲಿ ಅದು ಸದಾ ಜಾಗೃತವಾಗಿತ್ತು.
 
ಈಗ ನೋಡಿ ನಾವು ಯಾವ ಜಾತಿಗೆ ಸೇರಿದವರು ಎಂದು ತಿಳಿಯಲು ನಮ್ಮ ಜಾತಿ ಸರ್ಟಿಫಿಕೇಟ್ ಕೂಡಾ ನೋಡ ಬೇಕಾಗಿಲ್ಲ. ನಮ್ಮ ನಾಮದ ಕುರುಹು ಮತ್ತು ನಾವಾಡುವ ಭಾಷಾ ವೈಖರಿ ಅಷ್ಟೇ ಸಾಕು. ಹೆಸರಿನ ಉತ್ತರಾರ್ಧದಲ್ಲಿ ಖಾನ್, ಮಹಮ್ಮದ್ ಎಂದಿದ್ದರೆ ಮುಸ್ಲೀಮರೆಂದೂ, ಡಿಸೋಜಾ, ಫರ್ನಾಂಡೀಸ್ ಎಂತಿದ್ದರೆ ಕ್ರಿಶ್ಚಿಯನ್ನರೆಂದೂ, ಸಿಂಗ್ ಎಂತಿದ್ದರೆ ಸಿಖ್ಖರೆಂದೂ ಎಷ್ಟು ಸುಲಭವಾಗಿ ನಾವು ಒಂದು ಧರ್ಮದ ಜನತೆಯನ್ನು ಗುರುತಿಸಬಲ್ಲೆವೋ ಅಷ್ಟೇ ಸುಲಭವಾಗಿ ಹಿಂದೂ ಧರ್ಮದ ವಿವಿಧ ಜಾತಿಗಳ ಜನರನ್ನೂ ಅವರ ಹೆಸರಿನಂದಲೇ ಗುರುತಿಸಬಹುದು. ಇತ್ತೀಚೆಗೆ ಲಗ್ನ ಪತ್ರಿಕೆಯನ್ನು ನೋಡಿ ಒಬ್ಬರು ಹೇಳುತ್ತಿದ್ದರು " ಹುಡುಗ ವಕ್ಕಲಿಗರವನು, ಆದ್ರೆ  ಹುಡುಗಿ ತಂದೆ ಹೆಸರು ಹೇಗಿದೆ ನೋಡಿ ಗಂಗಾಧರ ರಾವ್ ಅಂತ. ಇದು ಇಂಟರ್ ಕ್ಯಾಸ್ಟ್ ಮ್ಯಾರೇಜ್ ಕಣ್ರೀ" ಅಂತಿದ್ರು. ರಾವ್ ಎನ್ನುವ ಉಪನಾಮ ವಕ್ಕಲಿಗರಲ್ಲಿ ಬರೊಲ್ಲ ಅನ್ನೋದು ಇವರ ತರ್ಕ ಹಾಗಾಗಿ ಇವರು ಜಾತಿಯವರಲ್ಲ ಎಂದು ನೇರವಾಗಿ ಹೇಳಬಲ್ಲರು. ಹೀಗೆ ಇಂತಹ ಜಾತಿಯವರು ಇಂತದ್ದೇ ಹೆಸರನ್ನು ಹೊಂದಿರಬೇಕು ಎಂದು ರೂಪಿಸಿದ್ದು ಯಾರು ? ಬ್ರಾಹ್ಮಣೋತ್ತಮ ಜನತೆಯ ಹೆಸರುಗಳು ಯಾಕೆ ಸುಂದರವಾಗಿ, ಕೇಳಲು ಲಾಲಿತ್ಯಪೂರ್ಣವಾಗಿರುತ್ತವೆ ? ಶೂದ್ರರ ಹೆಸರೇಕೆ ಕಿವಿಗೂ ಅಹಿತವಾಗಿರುತ್ತವೆ ?

ಬೇಕಾದರೆ ಗಮನಿಸಿ ನೋಡಿ ಕೇವಲ ಎರಡು-ಮೂರು ದಶಕಗಳ ಹಿಂದಿನ ಶೂದ್ರ ವರ್ಣದ ದಲಿತ ವ್ಯಕ್ತಿಗಳ ಹೆಸರುಗಳು ಹಾಗೂ ಬ್ರಾಹ್ಮಣ ವರ್ಣದ ವ್ಯಕ್ತಿಗಳ ಹೆಸರುನ್ನು ಹೋಲಿಸಿ ನೋಡಿ. ಶೂದ್ರರಲ್ಲಿ ಸಾಮಾನ್ಯವಾಗಿ ಗುತ್ಯ, ಚಮ್ಮಿ, ರಾಚ, ಪಿಳ್ಳ, ಚೋಮ, ಟೊಕ್ಕ, ಡೊಳ್ಳ ರೀತಿಯ ಹೆಸರು ಗಳು ಕಂಡು ಬಂದರೆ ಬ್ರಾಹ್ಮಣ ವರ್ಣದ ಜನತೆಯಲ್ಲಿ ಗುರುಮೂರ್ತಿ, ಚಂದ್ರಕಾಂತ, ಪದ್ಮನಾಭ, ಲಕ್ಷ್ಮೀ ನಾರಾಯಣ ಎಂಬ ರೀತಿಯ ಹೆಸರು ಗಳನ್ನು ಕಾಣಬಹುದು. ಹೀಗೆ ನಾಮದಲ್ಲೂ ತಾರತಮ್ಯಕ್ಕೆ ಕಾರಣವೇನು ?

ಸಾಮಾನ್ಯವಾಗಿ ಶೂದ್ರ ಸಮುದಾಯದಲ್ಲಿ ಮಕ್ಕಳು ಹುಟ್ಟಿದ ತಕ್ಷಣ ಅವರೇ ನೇರವಾಗಿ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ. ಅವರಿಗೆ ಪಂಚಾಂಗ ನೋಡಿ ಜಾತಕ ಬರೆದು ಹೆಸರಿಡುವ ಯಾವ ಜ್ಯೋತಿಷ್ಯ ವಿದ್ಯೆಯೂ ಗೊತ್ತಿಲ್ಲ. ಆದುದರಿಂದ ಮಕ್ಕಳು ಹುಟ್ಟಿದ ದಿನ, ಗಳಿಗೆಯನ್ನು ನೆನಪಿಟ್ಟುಕೊಂಡು ಪುರೋಹಿತರ ಬಳಿ ಹೋಗುವುದು ರೂಢಿ. ಪುರೋಹಿತರೋ ಮುಖ ನೋಡಿ ಮಣೆ ಹಾಕುವಂತವರು ಅವರು ಮೊದಲು ಕೇಳುವುದು   'ಯಾವ ಜಾತಿ ನಿಂದು?' ಅಂತ. ಜಾತಿ ಹೇಳೋಕೆ ಹಿಂದೆ ಮುಂದೆ ನೋಡಿದರೆ  ಎರಡನೇ ಪ್ರಶ್ನೆ ಕೇಳೋದು 'ಮನೆ ದೇವರು ಯಾವುದು ನಿಂದು ?' ಅಂತಇವೆರಡರಲ್ಲಿ ಯಾವುದು ಗೊತ್ತಾದ್ರೂ ಶೂದ್ರ ಮಕ್ಕಳಿಗೆ ಹೆಸರಿಡೋಕೆ ಪುರೋಹಿತರಿಗೆ ತುಂಬಾ ಸುಲಭ! ಅದರಂತೆ ಹುಡುಗನ ಜಾತಕದಲ್ಲಿ '' ಅಕ್ಷರದಿಂದ ಶುರುವಾಗೋ ಹೆಸರಿಡಬೇಕು ಅಂತ ಬಂದ್ರೆ  ಪುರೋಹಿತರು ಸೂಚಿಸುವುದು 'ಚಮ್ಮಿ' ಅಥವಾ 'ಚೌಡ' ಎಂಬ ಹೆಸರನ್ನೇ ಹೊರತು 'ಚಂದ್ರ ಶೇಖರ' ಅಂತ  ಅಲ್ಲ. ಪುರೋಹಿತರ ಮಾತನ್ನು ಶೂದ್ರನೆಂದಾದರೂ  ಮೀರುವುದುಂಟೇ ? ಸಾಧ್ಯವಿಲ್ಲ. ಮಾತು ಮೀರಿ ಎಲ್ಲಾದರೂ ಕೆಡುಕುಂಟಾದರೆ ಕಷ್ಟ ಕಷ್ಟ. ಆದ್ದರಿಂದ ಶೂದ್ರರ ಮಕ್ಕಳಿಗೆ ಚಮ್ಮಿ, ಚೌಡ ಹೆಸರೇ ಗತಿಆದರೆ ಈಗ ಪ್ರಸ್ತುತದಲ್ಲಿ ಇಂತಹ ಪರಿಸ್ಥಿತಿ ಇಲ್ಲ ಬಿಡಿ. ಶೂದ್ರರೆನಿಸಿಕೊಂಡವರೂ ವಿದ್ಯಾವಂತರಾಗಿ ಕತೆ, ಕಾದಂಬರಿ ಓದಿಸಿನಿಮಾಗಳನ್ನು ನೋಡಿ ಅಲ್ಲಿ ಬರುವ ನಾಯಕ-ನಾಯಕಿಯರ ಸುಂದರ ಹೆಸರುಗಳನ್ನೇ ತಮ್ಮ ಮಕ್ಕಳಿಗೂ ನಾಮಕರಣ ಮಾಡುತ್ತಿದ್ದಾರೆ. ಔಪಚಾರಿಕವಾಗಿ ಪುರೋಹಿತರ ಮನೆಗೆ ಹೋಗಿ ಬರುತ್ತಾರೆ ಅಷ್ಟೇ.

ಹೀಗೆ  ಸಜೀವ ಜೀವವನ್ನು ಗುರುತಿಸಲು ಇಡುವ ಹೆಸರಿನಲ್ಲೂ ಸಹ ತನ್ನ ಮಟ್ಟಕ್ಕೆ ಬರಬಾರದೆಂದು ಒಂದು ವರ್ಣ ಇನ್ನೊಂದು ವರ್ಣವನ್ನು ಬಹುಕಾಲದವರೆಗೆ ತನ್ನ ಅಂಕೆಯಲ್ಲಿಟ್ಟುಕೊಂಡಿದ್ದು ಸುಳ್ಳಲ್ಲ. ಹೆಸರು ನಮ್ಮ ಜಾತಿಯನ್ನು ಸೂಚಿಸುವಂತೆ ಇರಬಾರದು ಎಂಬುದು ನನ್ನ ಅಭಿಮತ. ಜಾತಿ ಗೊತ್ತಾದ್ರೆ ತಾನೇ ಜಾತಿ ಬೇದ, ತಾರತಮ್ಯ ಮಾಡೋದು ಆದ್ದರಿಂದ ಅದು ಗೊತ್ತಾಗದೇ ಇರೋದೇ ಒಳ್ಳೆಯದು. ಯಾರಿಗೆ ಯಾರನ್ನೂ ಸಹ ನೇರವಾಗಿ ನಿನ್ನ ಜಾತಿ ಯಾವುದು ಅಂತ ಕೇಳೋ ಧೈರ್ಯ ಇರೊಲ್ಲ. ಸುತ್ತೀ ಬಳಸೀ ಕೇಳಿ ಹೇಗಾದ್ರೂ ತಿಳಕೋ ಬೇಕು ಅನ್ನೋ ಹಂಬಲ ಇರುತ್ತೆ ಅಷ್ಟೆ. ಅಷ್ಟಕ್ಕೂ ಮನುಷ್ಯನಿಗೆ ನಿಜವಾಗಿಯೂ ಬೇಕಾಗಿರುವುದು ಪ್ರೀತಿ, ವಿಶ್ವಾಸ, ಸಹನೆ, ಸುಗುಣಗಳಿಂದ ಕೂಡಿದ ಜಾತ್ಯಾತೀತ ಮಾನವ ಸಂಬಂಧವೇ ಹೊರತು ಜಾತಿಯ ಕೊಂಪೆಯಲ್ಲೇ ಗಿರಕಿ ಹೊಡೆಯುವ, ಜಾತಿಗೋಸ್ಕರ ಅನಾಚಾರಕ್ಕಿಳಿಯುವ ರಾಕ್ಷಸ ಸಂಬಧವಲ್ಲ. ಅಲ್ಲವೇ ?
ರೇಣುಕಾತನಯ 
renukatanay@gmail.com

03 June 2010

under construction

03 April 2010

ಸಚ್ಚಿ ಕವನ



ಮಧುರ ಪ್ರೇಮ

ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ

ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ
ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ

ಪ್ರತಿ ಮಾತು ಸಿಹಿಯಾದ ಸಾಲೆ
ಪ್ರತಿ ಮುತ್ತು ಜೇನ್ಬೆರೆತ ಹಾಲೆ

ಹೃದಯದ ಮಿಡಿತವೆ ಪ್ರೀತಿಯ ಓಲೆ
ಅದ ಒದುತ್ತಿದೆ ಹೃದಯದ ಮೂಲೆಮೂಲೆ

ನಿಮಿಷನಿಮಿಷವು ಓಡುವ ಕಾಲೆ
ಹರುಷಹರುಷ ಆಡಿಸುತ್ತಿದೆ ಕೋಲು ಕೋಲಣ್ಣ ಕೋಲೆ

ಒಬ್ಬರಿಗಾಗಿ ಒಬ್ಬರು ಸೋಲೆ
ಗೆಲುವು ಅವರವರ ಪಾಲೆ

ಜಗವ ಮರೆಯುವ ಬಾರೆ ಗುಣಶೀಲೆ
ಆಡುತ ಒಲವಿನುಯ್ಯಾಲೆ

ಒಂದಾಗುವ ಬಳಿ ಬಾರೆ ಲೋಲೆ
ಹಾಡುತ ಸುವ್ವಿ ಸುವ್ವಾಲೆ

ಅನುಮಾನಿಸಿದರೆ ಸುಮ್ಮನೆ ತಲೆ ಶೂಲೆ
ಅನುಮಾನ ಬೇಡ, ನಮ್ಮದೆರಡು ದೇಹವಾದರು ಒಂದೇ ಸೂಲೇ

ನಮ್ಮ ನಂಟು ಕೀಳಲಾಗದ ನೂಲೆ
ಬಾ ತೊಡಿಸುವೆ ನಿನಗೆ ತಾಳಿ ಹೂಮಾಲೆ
ನವಜೀವನದ ಸವಿಯ ಸವಿಯೋಣ ಆಮೇಲೆ ಚಿಮ್ಮಲು ಬಯಕೆಗಳು ಮೇಲೆ ಮೇಲೆ
------------- ಸಕ್ಕತ್ ಸಚ್ಚಿ

24 March 2010

ಈ ಸಾವು ನ್ಯಾಯವೇ..??

ಅರಳದೇ ಬಾಡಿದ ಅನ್ನಪೂರ್ಣಳ ನೆನೆಯುತ...



ಡಿಯರ್ ಫ್ರೆಂಡ್ಸ್


ಕಳೆದ ವರ್ಷದ ಮಾರ್ಚ್ 24 ರ ಆ ಮಂಗಳವಾರದ ದಿನ ನೆನಪಾಗುತ್ತಿದ್ದಂತೆ ಸುಳಿವೀಯ್ಯದೆ ವಿಧಿಗೆ ವಶಳಾದ ಈ ಪುಟ್ಟ ಹುಡುಗಿ ಅನ್ನಪೂರ್ಣಳ ನೆನಪು ಎಡೆಬಿಡದೆ ಕಾಡುತ್ತಿದೆ. ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ನಿಶ್ಚಿತ ಆದರೆ ಹಿಂದೆ ಮುಂದೆ ಸುಳಿದಾಡಿಕೊಂಡಿದ್ದವರು ಅರೆಗಳಿಗೆಯಲ್ಲಿ ಇಲ್ಲವಾದರೆ 'ಈ ಸಾವು ನ್ಯಾಯವೇ' ಅನಿಸುತ್ತದೆ. ಅವರು ಉಳಿಸಿಹೋದ ನೆನಪುಗಳು ಅಳಿಯದೇ ಕಾಡುತ್ತಿರುತ್ತವೆ. ಈ ವಿಧಿಯಾಡುವ ಆಟಗಳೇ ವಿಚಿತ್ರ, ಬದುಕಬೇಕೆಂಬ ಆಸೆಹೊತ್ತು ಬದುಕಿಗಾಗಿ ಹಪಹಪಿಸುವವರನ್ನು ಬದುಕಲು ಬಿಡಲಾರದು ವಿಧಿ. ತುತ್ತು ಕೂಳಿಗೂ ಕರಕಷ್ಟವಾಗಿ, ತುಂಡು ಬಟ್ಟೆಗೆ ತತ್ವಾರವಾಗಿ ಈ ಬದುಕು ಸಾಕು ಎಂದು ಸಾವನ್ನು ಆಶಿಸುವವರ ಬಳಿ ಸಾವು ಸುಳಿಯಲೊಲ್ಲದು. ಕಾಲನ ಹೂಟವನು ಬಲ್ಲವರುಂಟೇ? ಕಾಲನ ಕುತಂತ್ರವನ್ನರಿಯದೆ ಮನದಲ್ಲಿ ಬೆಟ್ಟದಷ್ಟು ಆಸೆಗಳನ್ನಿಟ್ಟುಕೊಂಡು, ಬದುಕನ್ನು ಕಟ್ಟಿಕೊಳ್ಳಲು ಬಣ್ಣದ ಕನಸುಗಳನ್ನು ಹೆಣೆದುಕೊಂಡು, ಪುಟ್ಟ ಕಂದನ ಬರುವಿಕೆಗಾಗಿ ಹಗಲಿರುಳು ಹಂಬಲಿಸಿ ಕಂದ ಕಣ್ತೆರೆದಾಗ ಕಣ್ಮಚ್ಚಿದ ಅನ್ನಪೂರ್ಣಳ ಆತ್ಮಕ್ಕೆ ಅಕ್ಷರ ತರ್ಪಣವಿದು ಈ ಬರಹ.

ಅನ್ನಪೂರ್ಣ ನಮ್ಮ ಸಿಆಸು ಇಲಾಖೆಯ ಆಡಳಿತ ಕೋಶ ಶಾಖೆಯಲ್ಲಿ ಬೆರಳಚ್ಚುಗಾರ್ತಿಯಾಗಿದ್ದಳು. ವರ್ಷದ ಹಿಂದೆ ನೀವ್ಯಾರಾದರೂ ನಿಮ್ಮ ಜೇಷ್ಠತಾ ಪಟ್ಟಿಯನ್ನು ಪಡೆಯಲು ಈ ಶಾಖೆಗೆ ಹೋಗಿರುವಿರಾದರೆ ಖಂಡಿತಾ ಈ ಹುಡುಗಿಯನ್ನು ನೋಡಿರುತ್ತೀರಿ. ಈ ಭಾವಚಿತ್ರ ನೋಡಿಯಾದರೂ ನಿಮಗೆ ನೋಡಿದ ನೆನಪು ಮಸುಕು ಮಸುಕಾಗಿ ಮರುಕಳಿಸೀತು. ಕುಳ್ಳನೆಯ ಶರೀರ, ಮುದ್ದುಮುಖ, ಸದಾ ಹಸನ್ಮುಖಿಯಾಗಿದ್ದ ಮೃದು ಮಾತಿನ, ಮೆದು ಮನಸಿನ ಚಟುವಟಿಕೆಯ ಹುಡುಗಿಯಾಗಿದ್ದಳು ಅನ್ನಪೂರ್ಣ. ಅವಳೊಂದಿಗೆ ನಗುನಗುತ್ತಾ ಕಳೆದ ಕೆಲವೇ ದಿನಗಳ ನನ್ನ ನೆನಪುಗಳನ್ನು ನಿಮ್ಮ ಮುಂದೆ ಮುಂದಿಡುತ್ತಿದ್ದೇನೆ.

ನನಗೆ ಎರಡೂ ವರೆ ವರ್ಷಗಳ ಹಿಂದೆ 'ವಿಧಾನ ಸೌಧ'ದಲ್ಲಿ ಕೆಲಸ ಸಿಕ್ಕಿ, ಈ ಬೆಂಗಳೂರೆಂಬ ಬೆಂಗಳೂರಿಗೆ ನಾನು ಕಾಲಿಟ್ಟಾಗ ಯಾರೆಂದರೆ ಯಾರ ಪರಿಚಯವೂ ಇರಲಿಲ್ಲ. ವಿಧಾನ ಸೌಧದಲ್ಲಿ ಕೆಲಸ ಎಂಬುದೇ ನನ್ನಲ್ಲಿ ಭಯ ಮಿಶ್ರಿತ ಆತಂಕವನ್ನು ಸೃಷ್ಟಿಸಿತ್ತಾದ್ದರಿಂದ ಗಟ್ಟಿ ಧ್ವನಿಯಲ್ಲಿ ಬಾಯ್ತೆರೆದು ಮಾತನಾಡಲೂ ಭಯಪಡುತ್ತಿದ್ದೆ. ನಾವು ಕ.ಸ.ಸ ದಲ್ಲಿ ಕಿ.ಸ ರಾಗಿ ವರದಿ ಮಾಡಿಕೊಂಡ ಒಂದೇ ವಾರದಲ್ಲಿ ನಮಗೆ ಪೋಸ್ಟಿಂಗ್ ಸಹ ಮಾಡಲಾಯಿತು. ಪರ-ವಿರೋಧಗಳ ನಡುವೆ ನಮ್ಮ ಶಾಖೆ (ಆಡಳಿತ-ಸಿ) ಯಲ್ಲಿ ಕರ್ತವ್ಯಕ್ಕೆ ಹಾಜರಾದ ನಾನು ಹೊಸತನದ ಬಿಗುವಿನಲಿ ಸುಮ್ಮನೆ ಕುಳಿತಿದ್ದಾಗಲೊಮ್ಮೆ ಅನ್ನಪೂರ್ಣ ಬಂದು ಮಾತಿಗೆಳೆದಳು. ನಮ್ಮ ಶಾಖೆಯ ಬೆರಳಚ್ಚುಗಾರ್ತಿ ದೀಪಶ್ರೀ ಮತ್ತು ಅನ್ನಪೂರ್ಣಳ ನಡುವೆ ಆತ್ಮೀಯ ಗೆಳೆತನವಿತ್ತಾದ್ದರಿಂದ ಅನ್ನಪೂರ್ಣ ಆಗಾಗ ನಮ್ಮ ಸೆಕ್ಷನ್ ಗೆ ಬರುವುದು ರೂಢಿಯಾಗಿತ್ತು. ದಿನಕ್ಕೆ ಕನಿಷ್ಠ ನಾಲ್ಕೈದು ಬಾರಿಯಾದರೂ ಅನ್ನಪೂರ್ಣ ನಮ್ಮ ಸೆಕ್ಷನ್ ಗೆ ಬಂದು ಹೋಗುತ್ತಿದ್ದಳು. ಅಂದು ಬಂದವಳು ನನ್ನ ಇಹಪರಗಳನ್ನೆಲ್ಲವನ್ನು ವಿಚಾರಿಸುತ್ತಾ "ನಿಮಗೆ ಬೆಂಗಳೂರಲ್ಲಿ ಯಾರೂ ರಿಲೇಶನ್ನೇ ಇಲ್ವೇನ್ರೀ?" ಎಂದಳು. ನಾನು ಇಲ್ಲವೆಂದಷ್ಟೇ ತಲೆಯಲ್ಲಾಡಿಸುತ್ತಿದ್ದಂತೆ "ಅತ್ತೆ, ಮಾವ, ಮಾವನ ಮಕ್ಳು, ಅತ್ತೆ ಮಗಳು ಯಾರೂ ಇಲ್ವಾ?" ಎಂದು ಕಿಚಾಯಿಸಿದಳು. ಇವಳೊಂದಿಗೆ ದೀಪಶ್ರೀಯೂ ಧ್ವನಿಗೂಡಿಸಿ ಇಬ್ಬರೂ ರೇಗಿಸುತ್ತಿದ್ದುದು ಮೊತ್ತಮೊದಲಿಗೆ ನನ್ನ ಭಯದ ಬಲೂನು ಠುಸ್ ಎನ್ನಲು ಕಾರಣವಾಯಿತು. ನಾನು ಆತಂಕದ ಆವರಣದಿಂದ ಹೊರಬಂದು ಆತ್ಮೀಯತೆಯ ಅಂಗಳದಲ್ಲಿ ನಲಿಯಲು ದಾರಿಯಾಯ್ತು. ಬರಬರುತ್ತಾ ಈ ರೀತಿ ಕಿಚಾಯಿಸುವುದು, ಕಾಲೆಳೆಯುವುದು ನಮ್ಮಲ್ಲಿ ರೂಢಿಗತವಾಗಿ ಆತ್ಮೀಯತೆಯ ಬಂಧವನ್ನು ಭದ್ರಗೊಳಿಸುತ್ತಿತ್ತು.

ಅನ್ನಪೂರ್ಣ, ದೀಪಶ್ರೀ, ಮಾಲಾ, ಮತ್ತು ನಿರ್ಮಲ ಇವರದ್ದು ಒಂದು ಗುಂಪು. ಸರಿಯಾಗಿ ಊಟದ ಸಮಯಕ್ಕೆ ನಮ್ಮ ಸೆಕ್ಷನ್ ನಲ್ಲಿ ಹಾಜರಿರುತ್ತಿದ್ದರು. ಎಲ್ಲರೂ ಕುಳಿತು ಹರಟುತ್ತಾ ನನ್ನ ಟೇಬಲ್ ಮೇಲೆಯೇ ಊಟ ಮೆಲ್ಲುತ್ತಿದ್ದರು. ಎಲ್ಲರಿಗಿಂತಲೂ ಮೊದಲು ಬರುತ್ತಿದ್ದ ಅನ್ನಪೂರ್ಣ ನಾನಿನ್ನೂ ಕೆಲಸದಲ್ಲಿ ನಿರತನಾಗಿರುತ್ತಿದ್ದುದನ್ನು ಕಂಡು "ಹೊಟ್ಟೆ ಹಸೀತಿದೆ, ಎದ್ದೇಳ್ರೀ ಮೇಲೆ" ಎಂದು ಪ್ರೀತಿಯ ಮಾತಿನಿಂದಲೇ ದಬಾಯಿಸಿ ನನ್ನನ್ನು ಊಟಕ್ಕೆ ಕಳುಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ನಾನು ಕ್ಯಾಂಟೀನಿಗೆ ಹೋಗಿ ಊಟ ಮುಗಿಸಿ ಬಂದರೂ ಇವರ ಊಟ ಮತ್ತು ಮಾತು ಎರಡೂ ಮುಗಿಯುತ್ತಿರಲಿಲ್ಲ.! ಸೆಕ್ಷನ್ ನ ತುಂಬೆಲ್ಲಾ ನಗೆಯ ಹೊಗೆ ತುಂಬಿರುತ್ತಿತ್ತು!! ಅನ್ನಪೂರ್ಣಳ ಸಾವಿಗಿಂತ ಒಂದು ತಿಂಗಳ ಮೊದಲಿನವರೆಗೂ ನಮ್ಮ ಸೆಕ್ಷನ್ ನಲ್ಲಿ ಈ ವಾತಾವರಣವಿತ್ತು. ನಂತರದಲ್ಲಿ ದೀಪಶ್ರೀ, ಮಾಲಾ, ನಿರ್ಮಲ ರಿಗೆ ಮುಂಬಡ್ತಿ ಸಿಕ್ಕಿ ನಮ್ಮ ಸೆಕ್ಷನ್ ನಿಂದ ದೂರವಾದರೆ, ಅನ್ನಪೂರ್ಣ ಮಾತ್ರ ಇಹ ಲೋಕದಿಂದಲೇ ದೂರವಾದಳು.

ನಮ್ಮ ಸೆಕ್ಷನ್ ನಲ್ಲಿ ನನಗೂ ಮತ್ತು ದೀಪಶ್ರೀಗೂ ಒಂಥರಾ ಎಣ್ಣೆ ಸೀಗೆಕಾಯಿಯ ಸಂಬಂಧ. ಪ್ರತಿದಿನ ಒಂದಿಲ್ಲೊಂದು ವಿಚಾರಕ್ಕೆ ಒಬ್ಬರನ್ನೊಬ್ಬರು ರೇಗಿಸುವುದು, ಕಾಲೆಳೆಯುವುದು ಸಾಮಾನ್ಯವಾಗಿತ್ತು. ಹೀಗೆ ರೇಗಿಸದೆ ಕಾಲೆಳೆಯದೆ ದಿನಕಳೆದೆವೆಂದರೆ ಏನೋ ಕಳಕೊಂಡ ಅನುಭವ ನನಗಾಗುತ್ತಿತ್ತು. ಕೆಲವೊಮ್ಮೆ ಯಾವುದೋ ಅಕ್ಷರದ, ಪದದ ತಪ್ಪು ಬಳಕೆಯ ಬಗ್ಗೆಯೋ, ಉಚ್ಛಾರಣಾ ದೋಷದ ಬಗ್ಗೆಯೋ, ಒಬ್ಬರನ್ನೊಬ್ಬರು ಮಾತನಾಡಿಸುವ ಧಾಟಿಯ ಬಗ್ಗೆಯೋ, ಕ್ಷುಲ್ಲಕ ಟೀಕೆಯ ಬಗ್ಗೆಯೋ ಹೀಗೆ ಯಾವುದೋ ಒಂದು ಕಾರಣವಲ್ಲದ ಕಾರಣಕ್ಕೆ ನಮ್ಮಿಬ್ಬರಲ್ಲಿ ವಾಕ್ಸಮರ ನಡೆಯುತ್ತಿತ್ತು. ಅದು ಹಾಗೆ, ಇದು ಹೀಗೆ, ಇದು ಹೀಗೀಗೆ ಎಂಬಿತ್ಯಾದಿಯಲ್ಲಿ ವಾದ-ವಿವಾದಗಳು ಜರುಗುತ್ತಿದ್ದವು. ಇಂತಹ ಸಂದರ್ಭಗಳಲೆಲ್ಲ ಅನ್ನಪೂರ್ಣ- ದೀಪಶ್ರೀ ತನ್ನ ಗೆಳತಿಯಾಗಿದ್ದರೂ ಸಹ- ನನ್ನ ಪರವಾಗಿ ನಿಂತು ನನ್ನ ವಾದಕ್ಕೆ ಪುಷ್ಠಿ ನೀಡುತ್ತಿದ್ದಳು. ಇದನ್ನು ವಿರೋಧಿಸಿ ದೀಪಶ್ರೀ "ನೋಡೂ ನೀನೂ ಅವರ ಕಡೆ ಸೇರ್ಕೋಬೇಡ, ಸರಿ ಇರೊಲ್ಲ" ಎಂದು ತಾಕೀತು ಮಾಡಿದರೆ. "ಪಾಪ ಸುಮ್ನಿರೇ ನಿನಿಗಾದರೆ ನಾವೆಲ್ಲಾ ಇದೀವಿ, ಅವರಿಗೆ ಯಾರಿದಾರೆ ಹೇಳು" ಎಂದು ನನ್ನ ಪರವಾಗಿ ಮಾತನಾಡುತ್ತಿದ್ದಳು. ಇಂತಹ ಅನ್ನಪೂರ್ಣಳದ್ದು ತುಂಬಾ ಮೃದು ಮನಸ್ಸು, ಒಂದೇ ಒಂದು ದಿನವೂ ಅವಳು ಯಾರೊಡನೆಯೂ ರೇಗಾಡಿದ್ದನ್ನು, ಜಗಳ ಕಾಯ್ದಿದ್ದನ್ನು ನಾನಂತೂ ನೋಡಿಯೇ ಇಲ್ಲ. ಆಕೆಯದು ಅಷ್ಟೇ ಉದಾರ ಬುದ್ದಿ. ತಾನು ಗರ್ಭಿಣಿಯಾಗಿದ್ದಂತಹ ಸಂದರ್ಭದಲ್ಲಿ ತಿನ್ನಲು ತಂದಿರುತ್ತಿದ್ದ ಹಣ್ಣು-ಹಂಪಲು, ಬ್ರೆಡ್ಡು-ಬನ್ನು, ಸಿಹಿತಿಂಡಿ ಹೀಗೆ ಏನಾದರೂ ಸಹ ಅದರಲ್ಲಿ ಒಂದುಚಿಕ್ಕ ಪಾಲನ್ನು ಆಗಾಗ ನನಗಾಗಿ ಎತ್ತಿಟ್ಟು ಕೊಡುತ್ತಿದ್ದಳು. ನಾನು "ನನಗ್ಯಾಕ್ರೀ ಇವು, ಈಗ ನೀವೇ ಇಬ್ಬಿಬ್ಬರಾಗ್ತಾ ಇದೀರಿ ನೀವೇ ತಿನ್ಬೇಕು" ಎಂದು ತಮಾಷೆ ಮಾಡುತ್ತ ತಿನ್ನುತ್ತಿದ್ದೆ. ನನ್ನ ಅದ್ಯಾವ ಗುಣ ಅವಳ ಕನಿಕರಕ್ಕೆ ಕಾರಣವಾಗಿತ್ತೋ ಗೊತ್ತಿಲ್ಲ 'ಪರಶುರಾಮನ್ನ ಕಂಡ್ರೆ ಏನಾದ್ರೂ ಕೊಡಬೇಕು ಅನ್ಸುತ್ತೆ ಕಣೆ' ಅಂತ ತನ್ನ ಗೆಳತಿ ದೀಪಶ್ರೀ ಜೊತೆ ಆಗಾಗ ಹೇಳಿತ್ತಿದ್ದಳಂತೆ. ಹೀಗೆ ಹೇಳಿದಂತೆಯೇ ಆಗಾಗ ಏನಾದರೊಂದನ್ನು ತಂದು ಕೊಡುತ್ತಲೇ ಇದ್ದಳು. ಇಂತಹ ಅನ್ನಪೂರ್ಣ ದಿನಾ ಬೆಳಿಗ್ಗೆ ನಮ್ಮ ಸೆಕ್ಷನ್ ಗೆ ಬಂದು ಗುಡ್ ಮಾರ್ನಿಂಗ್ ಹೇಳಿ, ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗುತ್ತಿದ್ದಳು. ಒಂದೊಮ್ಮೆ ಬಾರದಿದ್ದರೆ 'ಯಾಕೋ ಅನ್ನಪೂರ್ಣ ಬರಲಿಲ್ಲವಲ್ಲಾ' ಅನಿಸುತ್ತಿತ್ತು. ನಮ್ಮ ಸೆಕ್ಷನ್ ನೊಂದಿಗೆ ಆಕೆಗೆ ಅಷ್ಟೊಂದು ಭಾವನಾತ್ಮಕವಾದ ನಂಟಿತ್ತು. ಆತ್ಮೀಯತೆಯ ಬೆಸುಗೆ ಇತ್ತು.

ಕಳೆದವರ್ಷ ಮಾರ್ಚ್ 24 ರ ಮಂಗಳವಾರದ ದಿನ ನಾನು ಎಂದಿನಂತೆ ಕಛೇರಿಗೆ ಬಂದು ಕೆಲಸ ಪ್ರಾರಂಭಿಸಬೇಕೆಂಬ ತಯಾರಿಯಲ್ಲಿದ್ದಾಗ 'ಅನ್ನಪೂರ್ಣ ಕೋಮಾದಲ್ಲಿದ್ದಾಳಂತೆ' ಎಂಬ ಸುದ್ದಿ ಬಂತು. ತಲ್ಲಣದ ಮನಸ್ಸಿನಿಂದ ತಕ್ಷಣ ದೀಪಶ್ರೀಗೆ ಫೋನಾಯಿಸಿದರೆ 'ಅನ್ನಪೂರ್ಣ ನಮ್ಮನ್ನೆಲ್ಲಾ ಬಿಟ್ಟು ಹೋಗ್ತಿದಾಳ್ರೀ, ಕೊನೇ ಬಾರಿ ಅವಳ ಮುಖವನ್ನಾದ್ರೂ ನೋಡ ಬನ್ರೀ' ಎಂಬ ಗದ್ಗದಿತ ಧ್ವನಿ ಕೇಳಿತು. ತರಾತುರಿಯಲ್ಲಿ ನಾವೆಲ್ಲಾ ಹೋಗಿ ಅವಳನ್ನು ನೋಡಬೇಕೆನ್ನುವಷ್ಟರಲ್ಲೇ ಅನ್ನಪೂರ್ಣಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅನ್ನಪೂರ್ಣ ಎಂಬ ನಿಶ್ಚಲ ದೇಹವನ್ನು ಮಾತ್ರ ಆಸ್ಪತ್ರೆಯಿಂದ ಮನೆಗೆ ಸಾಗಿಸಲಾಗಿತ್ತು. ಸದಾ ನಗುತ್ತಿದ್ದ ಹುಡುಗಿಯ ನೆನೆದು ಅಳುತ್ತಿದ್ದವರ ನಡುವೆ, ನಿದ್ದೆ ಬಂದು ಮಲಗಿರುವಳೇನೋ ಎಂಬಂತಿದ್ದ ಅನ್ನಪೂರ್ಣಳ ಆ ಮುದ್ದು ಮುಖವನ್ನು ಅಂತಿಮ ಬಾರಿಗೆ ನೋಡಿದೆ. ಆತ್ಮೀಯ ಕೊಂಡಿಯೊಂದು ಹೃದಯದಿಂದ ಕಳಚಿಕೊಂಡ ನೋವಿಗೆ ನನ್ನ ಅರಿವಿಗೂ ಬಾರದೇ ಕಣ್ಣಂಚಿನಲ್ಲಿ ಕಂಬನಿಯ ಪಸೆ ಜಿನುಗುತ್ತಿತ್ತು.

ಗರ್ಭಿಣಿಯಾಗಿದ್ದ ಅನ್ನಪೂರ್ಣ ಕೇವಲ ಮೂರು ವಾರಗಳ ಮೊದಲಷ್ಟೇ ಸಚಿವಾಲಯದಿಂದ ಬಿಡುಗಡೆ ಹೊಂದಿ ಮೈಸೂರಿನಲ್ಲಿ ನಿಯೋಜನೆ ಮೇಲೆ ಕೆಲಸಕ್ಕೆ ತೆರಳಿದ್ದಳು. ಹೆರಿಗೆಯ ದಿನ ಸಮೀಪಿಸಿದಂತೆ ಮತ್ತೆ ಬೆಂಗಳೂರಿಗೆ ಬಂದು ತನ್ನ ಚಿಕ್ಕಪ್ಪನ ಮನೆಯಲ್ಲೇ ಇದ್ದಳು. ಆ ಮಂಗಳವಾರಕ್ಕಿಂತ ಒಂದು ದಿನ ಮೊದಲು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವಳ ಚಿಕ್ಕಪ್ಪ ಅವಳನ್ನು ನಗರದ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಹುಟ್ಟುವ ಕಂದನ ನೆವವನ್ನಿಟ್ಟು ತಾಯ ಆಯುವನ್ನು ಮುಗಿಸಣಿಸಿದ್ದನೇನೋ ವಿಧಿ, ಅಂದು ಗಂಡು ಮಗುವಿಗೆ ಜನ್ಮವಿತ್ತ ಅನ್ನಪೂರ್ಣ ತನ್ನ ಜೀವವನ್ನು ವಿಧಿಗೊಪ್ಪಿಸಿದ್ದಳು. ಅಂದು ಮಗುವಿಗೆ ಜೀವವ ನೀಡಿ ತಾಯಿಯ ಜೀವವನ್ನು ಕಸಿದುಕೊಳ್ಳುವಲ್ಲಿ ವಿಧಿ ಯಶಸ್ವಿಯಾಗಿದ್ದ. ತಾಯಿ ಇಲ್ಲದೇ ಮಗು ಹೇಗೆ ಬೆಳೆದೀತು ಎಂಬ ಸಾಮಾನ್ಯ ಜ್ಞಾನವೂ ಇರಲಿಲ್ಲವೇನೋ ಆ ದುರ್ವಿಧಿಗೆ. ಹುಟ್ಟಿದ ಕೆಲ ಗಳಿಗೆಗಳಲ್ಲಿಯೇ ಮಗುವೂ ತಾಯಿಯ ಮಡಿಲನ್ನೇ ಸೇರಿತು. ಹುಟ್ಟುವ ಕಂದನ ಬಗ್ಗೆ, ಕಂದನ ಹೆಸರಿನ ಬಗ್ಗೆ, ಕಂದನ ನಗುವಿನ ಬಗ್ಗೆ, ಸಾವಿರ ಸಾವಿರ ಕನಸುಗಳನ್ನು ಕಟ್ಟಿಕೊಂಡಿದ್ದ ಅನ್ನಪೂರ್ಣ ಕಂದನ ಅಳುವನ್ನೂ ಕೇಳಲಾರದೆ ಕಣ್ಮುಚ್ಚಿದ್ದಳು. ಅನ್ನಪೂರ್ಣ ಇಲ್ಲದೆ ಇಂದಿಗೆ ವರ್ಷವೇ ಕಳೆದೋಯ್ತು. ಆದರೆ ಕಣ್ಣ ಪರದೆಯ ಹಿಂದೆ ಅವಳ ರೂಪವಿಂದೂ ಕಾಣಿಸುತ್ತಲೇ ಇದೆ. ಭಾವಭಿತ್ತಿಯಲಿ ಚಿತ್ರಿಸಿದ ಗೆರೆಗಳು ಮಸುಕಾಗದೇ ಹೊಳೆಯುತ್ತಿವೆ. ಆತ್ಮೀಯ ತಂಗಿಯ ಮುಗ್ದ ಮಾತು, ನಿಷ್ಕಪಟ ನಗು ಮನಸ್ಸಿನ ಮೂಲೆಯಲ್ಲಿ ಅನುರಣಿಸುತ್ತಲೇ ಇವೆ. ಅಪೂರ್ಣಾಯುವಾಗಿ ಹೋದ ಅನ್ನಪೂರ್ಣಳ ಆತ್ಮಕ್ಕೆ ಮರುಜನ್ಮವೆಂಬುದೊಂದಿದ್ದರೆ ಮತ್ತೆ ಇಲ್ಲಿಯೇ ಹುಟ್ಟಿ ಬರಲಿ ಅನ್ನಪೂರ್ಣ ಳಾಗಿ ಎಂದು ಮನಸ್ಸು ಪದೇ ಪದೇ ಆಶಿಸುತ್ತಿದೆ.

ಪರಶು..,
parashusagar@gmail.com