ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

01 January 2011

ಹೊಸ ವರ್ಷದ ಹೊಸ್ತಿಲಲಿ...



ಹತ್ತು ಕಳೆಯಿತು, ಹನ್ನೊಂದು ಬಂದಿತು.

2010ನೇ ಕೋಣೆಯ ಪಯಣವನು ಮುಗಿಸಿ, 2011ನೇ ಕೋಣೆಯ ಹೊಸ್ತಿಲಲಿ ನಿಂತು ಕದವ ತೆರೆದಿದ್ದೇವೆ. ಹೌದು ಹೊಸಮನೆಯ ಹೊಸ್ತಿಲಲ್ಲವಿದು, ಹೊಸ ಕೋಣೆಯ ಹೊಸ್ತಿಲು.! ಕತ್ತಲು, ಬೆಳಕುಗಳ ಮಿಶ್ರಣವೇ ಮೆತ್ತಿರುವ ಕಿರಿದಾದ ಕೋಣೆ.! ಹಿಂದಿನ ಪಯಣದ ಅನುಭವವ ನೆನೆಯುತ, ಮುಂದಿನ ಪಯಣದ ದಾರಿಯನು ಅರಿಯುತ ದಿನದ ಹೆಜ್ಜೆಯನಿಟ್ಟು ಸಾಗಲೇ ಬೇಕು ನಾವು. ಕತ್ತಲೋ, ಬೇಳಕೋ, ಕಷ್ಟವೋ, ಸುಖವೋ ಬಂದುದನನುಭವಿಸಿ ಮುನ್ನಡೆಯಲೇ ಬೇಕು. ಹಿಂತಿರುಗಿ ನಡೆಯುವ, ಮುಂದೋಗದೆ ನಿಲ್ಲುವ ಅರ್ಹತೆಯು ನಮಗಿಲ್ಲ.  ಕಾಲನ ಕೈಯೊಳಗೆ ಪರವಶರು ನಾವು. ಅವನಾಣತಿಯನು ಮೀರಿ ಉಸಿರಾಡುವಂತೆಯೂ ಇಲ್ಲ.! ಪ್ರತಿಕ್ಷಣವನು ವ್ಯರ್ಥಯಿಸಿ  ಸಾವಿನೆಡೆಗೆ ಸಾಗುತ್ತಿರುವೆವು ನಾವು. ನಿಜ, ಆದರೂ ನಮಗೆ ಸಾವೆಂಬುದರ ಭಯ ಕಿಂಚಿತ್ತೂ ಇಲ್ಲ.! ಆಯುಷ್ಯದ ಗಡಿಯ ಗುರುತು ತಿಳಿದಿಲ್ಲ. ತಿಳಿದಿದ್ದರೆ ಮನಸ್ಸು ಚಡಪಡಿಸುತ್ತಿತ್ತೇನೋ ? ಸ್ವಾರ್ಥತೆಯ ಬಿಟ್ಟು ದೇಹ ದುಡಿಯುತ್ತಿತ್ತೇನೋ ?  ಆದರೇನು ಮಾಡುವುದು ಸಾವಿನ ಗಡಿಯ ಗುರುತು ತಿಳಿಯಲು ಸಾವೆಂಬುದೇನು ಸರ್ಕಾರಿ ನೌಕರಿಯೇ ? ಅರವತ್ತಕ್ಕೆ ನಿವೃತ್ತಿಹೊಂದಿ ಮನೆಗೆ ತೆರಳುವಂತಿದೆಯೇ?.!!

ಅಯ್ಯೋ ಹೊಸ ವರ್ಷದ ಹೊಸ್ತಿಲಲಿ ನಿಂತ ನಮಗೆ ಸಾವಿನ ಮಾತೇಕೆಂದುಕೊಳ್ಳುವೆವಾದರೂ  ಕಳೆದುಕೊಂಡಿದ್ದರ ನೆನಪೇ ಅತಿಯಾಗಿ ಕಾಡುತ್ತದೆ.  ಅಗಲಿದ ಆತ್ಮಿಯರು ತುಂಬಲಾಗದ ನಷ್ಟವಾಗುತ್ತಾರೆ. ಕಳೆದ ದಿನಗಳು ಉಳಿಸಿಹೋದ ಕಲೆಯಲ್ಲೆ ಎದ್ದು ಕಾಣುವುದು ಇಂತಹ ನೆನಪೇ ಅಲ್ಲವೇ ?

ಅದೇನೇ ಇರಲಿ,   ಭೂಮಿಗೆ ಬಿದ್ದ ಸೂರ್ಯರಶ್ಮಿ ವ್ಯರ್ಥವಾಗುವುದಿಲ್ಲ. ಗರಿಕೆಗೂ ಜೀವ ಸ್ಪುರಿಸುವಂತೆ ಮಾಡುತ್ತದೆ. ಪ್ರತಿಕ್ಷಣವೂ ಸದ್ದಿಲ್ಲದೆ ಚಲಿಸುತ್ತಲೇ ಇರುತ್ತದೆ. ಈ ಚಲನೆಯೇ ಬದಲಾವಣೆಯನ್ನೂ ತರುತ್ತದೆ. ಇಂದಿನ ಸಂಬಂಧಗಳು ಮುಂದೇನೋ ಆಗುತ್ತವೆ. ಪುನರ್ನವವು ಸಾರ್ಥವಾದಂತೆ, ಸಾರ್ಥವು ಮನನ ವಾದಂತೆ.!

 ಬದಲಾವಣೆಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳೋಣ. ಕಳೆದ ದಿನಗಳ ಸವಿನೆನಪುಗಳನ್ನೇ ನೆನೆನೆನೆದು ಕಹಿ ಗಳಿಗೆಗಳನು ಶಾಶ್ವತವಾಗಿ ಮರೆಯಲೆತ್ನಿಸೋಣ. ಮುಂದಿನ ಜೀವನದ ಪ್ರಜ್ವಲತೆಗೆ ಸವಿಗನಸ ಕಾಣೋಣ. ಕನಸುಗಳ ನೆನಸಿಗೆ ಹಗಲಿರುಳು ಶ್ರಮಿಸೋಣ. ಹೊಸ ವರುಷ ಎಲ್ಲರಿಗೂ ಹೊಸ ಹುರುಪು ಕೊಡಲಿ.  ಹೊಸ ಹರುಷ ತರಲಿ. ಬದುಕಿನಲಿ ನವಚೈತನ್ಯವು ಉಮ್ಮಳಿಸಲಿ..


  " ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು "