ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

03 November 2010

:: ಜಾತಿ ಮತ್ತು ಹೆಸರು ::


(ದಿನಾಂಕ: 27/10/2010 ರ 'ಸಾರ್ಥ' ದಲ್ಲಿ   ಪ್ರಕಟವಾದ "ಜಾತಿ ಪದ್ದತಿ : ರೇವಪ್ಪನ ಅವಲೋಕನ"ಲೇಖನಕ್ಕೆ ಅನಿಸಿಕೆಯಾಗಿ ಬರೆದ ಬರಹ)

ಜಾತಿ ಯಂತಹ ಸೂಕ್ಷ್ಮ ವಿಚಾರದ ಬಗ್ಗೆ ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು. ಎಲ್ಲೇ ಸ್ವಲ್ಪ ಎಚ್ಚರ ತಪ್ಪಿದರೂ ಯಾರನ್ನೋ ಉದ್ದೇಶಪೂರ್ವಕವಾಗಿ ಆಡಿಕೊಂಡಂತಾಗಿ ಬಿಡುತ್ತದೆ ಉದ್ದೇಶ ನನಗೆ ಖಂಡಿತಾ ಇಲ್ಲ ಎನ್ನುತ್ತಲೇ ...

ನಮ್ಮ ಹಿಂದೂಧರ್ಮದಲ್ಲಿ ವೃತ್ತಿ ದ್ಯೂತಕವಾಗಿ ರೂಪುಗೊಂಡ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಚತುರ್ವರ್ಣಗಳು ಕಾಲಾನಂತರದಲ್ಲಿ ಜಾತಿ ಗಳಾಗಿ ಮಾರ್ಪಾಟುಗೊಂಡವು ಎನ್ನಲಾಗುತ್ತಿದೆ. ನಾಲ್ಕು ವರ್ಣಗಳಲ್ಲೇ ಕ್ರಮೇಣವಾಗಿ ಒಂದೊಂದರಲ್ಲೇ ಹಲವಾರು ಒಳಪಂಗಡಗಳು, ಉಪಜಾತಿಗಳು ಸೃಷ್ಟಿಯಾದವು. ಒಂದು ವರ್ಣದೊಳಗಿನ ವಿಂಗಡನೆಗೆ, ಜಾತಿ-ಉಪಜಾತಿಗಳ ಸೃಷ್ಠಿಗೆ ಇನ್ನೊಂದು ವರ್ಣ ನೇರವಾಗಿ ಕಾರಣವಾಗಿಲ್ಲದೇ ಇರಬಹುದು ಆದರೆ ಒಂದು ವರ್ಣದ ಜನತೆ ಅದೇ ವರ್ಣದಲ್ಲೇ ಜೀವನ ಸವೆಸಲು ಮತ್ತು ಗಡಿದಾಟಿ ಬಾರದಂತೆ ಕಾಯ್ದುಕೊಳ್ಳಲು ಇನ್ನೊಂದು ವರ್ಣ ಸದಾ ಜಾಗೃತವಾಗಿತ್ತು ಎನ್ನಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಶೂದ್ರನು ಶೂದ್ರನಾಗೇ ಇರಬೇಕೆಂಬುದು ಬ್ರಾಹ್ನಣ ವರ್ಣದ ಅಪೇಕ್ಷೆಯಾಗಿತ್ತು. ಅವರನ್ನು ಹಾಗೇ ಇರಿಸುವಲ್ಲಿ ಅದು ಸದಾ ಜಾಗೃತವಾಗಿತ್ತು.
 
ಈಗ ನೋಡಿ ನಾವು ಯಾವ ಜಾತಿಗೆ ಸೇರಿದವರು ಎಂದು ತಿಳಿಯಲು ನಮ್ಮ ಜಾತಿ ಸರ್ಟಿಫಿಕೇಟ್ ಕೂಡಾ ನೋಡ ಬೇಕಾಗಿಲ್ಲ. ನಮ್ಮ ನಾಮದ ಕುರುಹು ಮತ್ತು ನಾವಾಡುವ ಭಾಷಾ ವೈಖರಿ ಅಷ್ಟೇ ಸಾಕು. ಹೆಸರಿನ ಉತ್ತರಾರ್ಧದಲ್ಲಿ ಖಾನ್, ಮಹಮ್ಮದ್ ಎಂದಿದ್ದರೆ ಮುಸ್ಲೀಮರೆಂದೂ, ಡಿಸೋಜಾ, ಫರ್ನಾಂಡೀಸ್ ಎಂತಿದ್ದರೆ ಕ್ರಿಶ್ಚಿಯನ್ನರೆಂದೂ, ಸಿಂಗ್ ಎಂತಿದ್ದರೆ ಸಿಖ್ಖರೆಂದೂ ಎಷ್ಟು ಸುಲಭವಾಗಿ ನಾವು ಒಂದು ಧರ್ಮದ ಜನತೆಯನ್ನು ಗುರುತಿಸಬಲ್ಲೆವೋ ಅಷ್ಟೇ ಸುಲಭವಾಗಿ ಹಿಂದೂ ಧರ್ಮದ ವಿವಿಧ ಜಾತಿಗಳ ಜನರನ್ನೂ ಅವರ ಹೆಸರಿನಂದಲೇ ಗುರುತಿಸಬಹುದು. ಇತ್ತೀಚೆಗೆ ಲಗ್ನ ಪತ್ರಿಕೆಯನ್ನು ನೋಡಿ ಒಬ್ಬರು ಹೇಳುತ್ತಿದ್ದರು " ಹುಡುಗ ವಕ್ಕಲಿಗರವನು, ಆದ್ರೆ  ಹುಡುಗಿ ತಂದೆ ಹೆಸರು ಹೇಗಿದೆ ನೋಡಿ ಗಂಗಾಧರ ರಾವ್ ಅಂತ. ಇದು ಇಂಟರ್ ಕ್ಯಾಸ್ಟ್ ಮ್ಯಾರೇಜ್ ಕಣ್ರೀ" ಅಂತಿದ್ರು. ರಾವ್ ಎನ್ನುವ ಉಪನಾಮ ವಕ್ಕಲಿಗರಲ್ಲಿ ಬರೊಲ್ಲ ಅನ್ನೋದು ಇವರ ತರ್ಕ ಹಾಗಾಗಿ ಇವರು ಜಾತಿಯವರಲ್ಲ ಎಂದು ನೇರವಾಗಿ ಹೇಳಬಲ್ಲರು. ಹೀಗೆ ಇಂತಹ ಜಾತಿಯವರು ಇಂತದ್ದೇ ಹೆಸರನ್ನು ಹೊಂದಿರಬೇಕು ಎಂದು ರೂಪಿಸಿದ್ದು ಯಾರು ? ಬ್ರಾಹ್ಮಣೋತ್ತಮ ಜನತೆಯ ಹೆಸರುಗಳು ಯಾಕೆ ಸುಂದರವಾಗಿ, ಕೇಳಲು ಲಾಲಿತ್ಯಪೂರ್ಣವಾಗಿರುತ್ತವೆ ? ಶೂದ್ರರ ಹೆಸರೇಕೆ ಕಿವಿಗೂ ಅಹಿತವಾಗಿರುತ್ತವೆ ?

ಬೇಕಾದರೆ ಗಮನಿಸಿ ನೋಡಿ ಕೇವಲ ಎರಡು-ಮೂರು ದಶಕಗಳ ಹಿಂದಿನ ಶೂದ್ರ ವರ್ಣದ ದಲಿತ ವ್ಯಕ್ತಿಗಳ ಹೆಸರುಗಳು ಹಾಗೂ ಬ್ರಾಹ್ಮಣ ವರ್ಣದ ವ್ಯಕ್ತಿಗಳ ಹೆಸರುನ್ನು ಹೋಲಿಸಿ ನೋಡಿ. ಶೂದ್ರರಲ್ಲಿ ಸಾಮಾನ್ಯವಾಗಿ ಗುತ್ಯ, ಚಮ್ಮಿ, ರಾಚ, ಪಿಳ್ಳ, ಚೋಮ, ಟೊಕ್ಕ, ಡೊಳ್ಳ ರೀತಿಯ ಹೆಸರು ಗಳು ಕಂಡು ಬಂದರೆ ಬ್ರಾಹ್ಮಣ ವರ್ಣದ ಜನತೆಯಲ್ಲಿ ಗುರುಮೂರ್ತಿ, ಚಂದ್ರಕಾಂತ, ಪದ್ಮನಾಭ, ಲಕ್ಷ್ಮೀ ನಾರಾಯಣ ಎಂಬ ರೀತಿಯ ಹೆಸರು ಗಳನ್ನು ಕಾಣಬಹುದು. ಹೀಗೆ ನಾಮದಲ್ಲೂ ತಾರತಮ್ಯಕ್ಕೆ ಕಾರಣವೇನು ?

ಸಾಮಾನ್ಯವಾಗಿ ಶೂದ್ರ ಸಮುದಾಯದಲ್ಲಿ ಮಕ್ಕಳು ಹುಟ್ಟಿದ ತಕ್ಷಣ ಅವರೇ ನೇರವಾಗಿ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ. ಅವರಿಗೆ ಪಂಚಾಂಗ ನೋಡಿ ಜಾತಕ ಬರೆದು ಹೆಸರಿಡುವ ಯಾವ ಜ್ಯೋತಿಷ್ಯ ವಿದ್ಯೆಯೂ ಗೊತ್ತಿಲ್ಲ. ಆದುದರಿಂದ ಮಕ್ಕಳು ಹುಟ್ಟಿದ ದಿನ, ಗಳಿಗೆಯನ್ನು ನೆನಪಿಟ್ಟುಕೊಂಡು ಪುರೋಹಿತರ ಬಳಿ ಹೋಗುವುದು ರೂಢಿ. ಪುರೋಹಿತರೋ ಮುಖ ನೋಡಿ ಮಣೆ ಹಾಕುವಂತವರು ಅವರು ಮೊದಲು ಕೇಳುವುದು   'ಯಾವ ಜಾತಿ ನಿಂದು?' ಅಂತ. ಜಾತಿ ಹೇಳೋಕೆ ಹಿಂದೆ ಮುಂದೆ ನೋಡಿದರೆ  ಎರಡನೇ ಪ್ರಶ್ನೆ ಕೇಳೋದು 'ಮನೆ ದೇವರು ಯಾವುದು ನಿಂದು ?' ಅಂತಇವೆರಡರಲ್ಲಿ ಯಾವುದು ಗೊತ್ತಾದ್ರೂ ಶೂದ್ರ ಮಕ್ಕಳಿಗೆ ಹೆಸರಿಡೋಕೆ ಪುರೋಹಿತರಿಗೆ ತುಂಬಾ ಸುಲಭ! ಅದರಂತೆ ಹುಡುಗನ ಜಾತಕದಲ್ಲಿ '' ಅಕ್ಷರದಿಂದ ಶುರುವಾಗೋ ಹೆಸರಿಡಬೇಕು ಅಂತ ಬಂದ್ರೆ  ಪುರೋಹಿತರು ಸೂಚಿಸುವುದು 'ಚಮ್ಮಿ' ಅಥವಾ 'ಚೌಡ' ಎಂಬ ಹೆಸರನ್ನೇ ಹೊರತು 'ಚಂದ್ರ ಶೇಖರ' ಅಂತ  ಅಲ್ಲ. ಪುರೋಹಿತರ ಮಾತನ್ನು ಶೂದ್ರನೆಂದಾದರೂ  ಮೀರುವುದುಂಟೇ ? ಸಾಧ್ಯವಿಲ್ಲ. ಮಾತು ಮೀರಿ ಎಲ್ಲಾದರೂ ಕೆಡುಕುಂಟಾದರೆ ಕಷ್ಟ ಕಷ್ಟ. ಆದ್ದರಿಂದ ಶೂದ್ರರ ಮಕ್ಕಳಿಗೆ ಚಮ್ಮಿ, ಚೌಡ ಹೆಸರೇ ಗತಿಆದರೆ ಈಗ ಪ್ರಸ್ತುತದಲ್ಲಿ ಇಂತಹ ಪರಿಸ್ಥಿತಿ ಇಲ್ಲ ಬಿಡಿ. ಶೂದ್ರರೆನಿಸಿಕೊಂಡವರೂ ವಿದ್ಯಾವಂತರಾಗಿ ಕತೆ, ಕಾದಂಬರಿ ಓದಿಸಿನಿಮಾಗಳನ್ನು ನೋಡಿ ಅಲ್ಲಿ ಬರುವ ನಾಯಕ-ನಾಯಕಿಯರ ಸುಂದರ ಹೆಸರುಗಳನ್ನೇ ತಮ್ಮ ಮಕ್ಕಳಿಗೂ ನಾಮಕರಣ ಮಾಡುತ್ತಿದ್ದಾರೆ. ಔಪಚಾರಿಕವಾಗಿ ಪುರೋಹಿತರ ಮನೆಗೆ ಹೋಗಿ ಬರುತ್ತಾರೆ ಅಷ್ಟೇ.

ಹೀಗೆ  ಸಜೀವ ಜೀವವನ್ನು ಗುರುತಿಸಲು ಇಡುವ ಹೆಸರಿನಲ್ಲೂ ಸಹ ತನ್ನ ಮಟ್ಟಕ್ಕೆ ಬರಬಾರದೆಂದು ಒಂದು ವರ್ಣ ಇನ್ನೊಂದು ವರ್ಣವನ್ನು ಬಹುಕಾಲದವರೆಗೆ ತನ್ನ ಅಂಕೆಯಲ್ಲಿಟ್ಟುಕೊಂಡಿದ್ದು ಸುಳ್ಳಲ್ಲ. ಹೆಸರು ನಮ್ಮ ಜಾತಿಯನ್ನು ಸೂಚಿಸುವಂತೆ ಇರಬಾರದು ಎಂಬುದು ನನ್ನ ಅಭಿಮತ. ಜಾತಿ ಗೊತ್ತಾದ್ರೆ ತಾನೇ ಜಾತಿ ಬೇದ, ತಾರತಮ್ಯ ಮಾಡೋದು ಆದ್ದರಿಂದ ಅದು ಗೊತ್ತಾಗದೇ ಇರೋದೇ ಒಳ್ಳೆಯದು. ಯಾರಿಗೆ ಯಾರನ್ನೂ ಸಹ ನೇರವಾಗಿ ನಿನ್ನ ಜಾತಿ ಯಾವುದು ಅಂತ ಕೇಳೋ ಧೈರ್ಯ ಇರೊಲ್ಲ. ಸುತ್ತೀ ಬಳಸೀ ಕೇಳಿ ಹೇಗಾದ್ರೂ ತಿಳಕೋ ಬೇಕು ಅನ್ನೋ ಹಂಬಲ ಇರುತ್ತೆ ಅಷ್ಟೆ. ಅಷ್ಟಕ್ಕೂ ಮನುಷ್ಯನಿಗೆ ನಿಜವಾಗಿಯೂ ಬೇಕಾಗಿರುವುದು ಪ್ರೀತಿ, ವಿಶ್ವಾಸ, ಸಹನೆ, ಸುಗುಣಗಳಿಂದ ಕೂಡಿದ ಜಾತ್ಯಾತೀತ ಮಾನವ ಸಂಬಂಧವೇ ಹೊರತು ಜಾತಿಯ ಕೊಂಪೆಯಲ್ಲೇ ಗಿರಕಿ ಹೊಡೆಯುವ, ಜಾತಿಗೋಸ್ಕರ ಅನಾಚಾರಕ್ಕಿಳಿಯುವ ರಾಕ್ಷಸ ಸಂಬಧವಲ್ಲ. ಅಲ್ಲವೇ ?
ರೇಣುಕಾತನಯ 
renukatanay@gmail.com