ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

24 September 2009

ಬಲಗೈಯಿಂದ ಕೊಟ್ಟಿದ್ದು ಎಡಗೈಯಿಗೆ ತಿಳಿಯಬಾರದು


ಹಾಯ್ ಫ್ರೆಂಡ್ಸ್...

ಸ್ವಯಂಕೃತಾಪರಾಧದಿಂದಾಗಿ ಘಟಿಸುವ ಘಟನೆಗಳಲ್ಲಿ ನೊಂದವರಿಗೆ ಲಕ್ಷೋಪಲಕ್ಷ ಪರಿಹಾರವನ್ನು ನೀಡಿ, ನಮ್ಮ ಜನಪ್ರತಿನಿಧಿಗಳು ಪ್ರಚಾರ ಪಡೆಯುವಾಗಲೆಲ್ಲಾ ನನ್ನ ಮನಸ್ಸು ಕಸಿವಿಸಿಗೊಳ್ಳುತ್ತದೆ. ಪ್ರಸ್ತುದಲ್ಲಿ ನೊಂದವರನ್ನು ಸಂತೈಸುವ ನೆವದಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಹಣದ ಚೆಕ್ಕನ್ನು ನೀಡುವ ಭಂಗಿಯ ಪೋಟೋಗಳು ರಾರಾಜಿಸುವಂತೆ ಮಾಡುವುದನ್ನು ಕಂಡಾಗ ಇವರು ಮುಂದೆ ಘಟಿಸಲಿರುವ ಇನ್ಯಾವುದೋ ಇಂತಹ ಘಟನೆಗೆ ಮುನ್ನುಡಿ ಬರೆಯುತ್ತಿದ್ದಾರಾ ಅನಿಸುತ್ತದೆ. ಕೆಲವು ತಿಂಗಳ ಹಿಂದೆ ಬೆಂಗಳೂರಿನ ಮೋರಿಯೊಂದರಲ್ಲಿ ಬಾಲಕ ಅಭಿಷೇಕ ಕೊಚ್ಚಿಕೊಂಡು ಹೋಗಿ ಆನಂತರ ನಮ್ಮ ಪ್ರತಿನಿಧಿಗಳು ಸಾಂತ್ವಾನದೊಂದಿಗೆ 'ಪರಿಹಾರ ಹಣ' ವನ್ನು ನೀಡುವಾಗ ಹೀಗೇ ಅನಿಸಿತ್ತು. ಮೊನ್ನೆ ಮೊನ್ನೆ ಇದೇ ಬೆಂಗಳೂರಿನ ಮೋರಿಯಲ್ಲಿ ಬಾಲಕ ವಿಜಯ್ ಕೂಡಾ ತೇಲಿ ಹೋಗಿ ಹೀಗೇ ಪರಿಹಾರದ ಹಣ ನೀಡುವಾಗಲೂ ಹೀಗೇ ಅನಿಸಿತು. ರಾಜ್ಯದ ರೈತನೊಬ್ಬ ಬದುಕಿಗೆ ಅಂಜಿ ಸಾವಿಗೆ ಶರಣಾದಾಗ 'ಸಾಲ ಭಾದೆ ತಾಳದೆ ರೈತನ ಆತ್ಮಹತ್ಯೆ' ಎಂದು ಸಾಂತ್ವಾನದೊಂದಿಗೆ ಹಣ ನೀಡಿದಾಗಲೂ ಮುಂದೊಂದು ಇಂತಹುದೇ ಘಟನೆಗೆ ಇದು ಪ್ರೇರೇಪಣೆಯಾಗಬಹುದಾ ಅನಿಸಿದೆ. ಅನಿಸುತ್ತಿದೆ.

ಇವೆಲ್ಲವೂ ಆಕಸ್ಮಿಕ ಘಟನೆಗಳಾಗಿರಬಹುದು ಆದರೆ ಮುಂದೆ ಘಟಿಸುವಂತಹವೂ ಆಕಸ್ಮಿಕವೇ ಆಗಿರುತ್ತವಾ...? ಈ ಜಗತ್ತಿನಲ್ಲಿ ಹಣದ ವ್ಯಾಮೋಹದಿಂದಾಗಿ ಎಂತೆಂತಹ ಘಟನೆಗಳು ಬೇಕಾದರೂ ಜರುಗಬಹುದು. ಹೆಣ್ಣು, ಹೊನ್ನು, ಮಣ್ಣು ಈ ಮೂರರಿಂದಾಗಿಯೇ ಈ ಧರೆಯಲ್ಲಿ ಅಕ್ರಮ, ಅನಾಚಾರಗಳು, ನಡೆಯುತ್ತಿವೆ ಎಂಬುದು ನಮಗೆ ಮಹಾಭಾರತದ ಕಾಲದಿಂದಲೂ ಗೊತ್ತಿರುವ ವಿಚಾರ. ಈ ಮೂರರಲ್ಲಿ ಹೆಣ್ಣನ್ನು ಹೊರತುಪಡಿಸಿ ಉಳಿದೆರಡರ ಹಿಂದಿರುವುದು ಮನುಷ್ಯನ ಹಣದ ವ್ಯಾಮೋಹ. ಈ ವ್ಯಾಮೋಹಕ್ಕೆ ಬಲಿಯಾದ ಮನುಷ್ಯ ಹಣದ ಗಳಿಕೆಗಾಗಿ ಇಂದು ಎಲ್ಲಾ ರೀತಿಯ ಕುಕೃತ್ಯಗಳನ್ನೂ ಮಾಡುತ್ತಿದ್ದಾನೆ. ಹಣಕ್ಕಾಗಿಯೇ ಹೊತ್ತು, ಹೆತ್ತು, ಸಾಕಿದ ತಂದೆ-ತಾಯಿಯನ್ನೂ ನಿರ್ದಯವಾಗಿ ಕೊಲೆಗೈದ ಮಕ್ಕಳಿಲ್ಲವೇ..? ಸೋದರ-ಸೋದರಿಯರನ್ನೇ ಹೆಣವಾಗಿಸಿದ ಸೋದರರಿಲ್ಲವೇ..? ಬಂಧುತ್ವವನ್ನೇ ಮರೆತು ಬಾಂಧವ್ಯಕ್ಕೆ ಬೆಂಕಿ ಇಟ್ಟ ಬಂಧುಗಳಿಲ್ಲವೇ..? ಹೀಗಿರುವಾಗ ಸುಲಭವಾಗಿ ಸಿಗುವ 'ಪರಿಹಾರದ ಹಣ'ಕ್ಕಾಗಿ ಇಂತಹ ಆಕಸ್ಮಿಕ ಘಟನೆಗಳನ್ನು ಸೃಷ್ಟಿಸುವ ನೀಚರಿರಲಾರರೆನ್ನಲಾದೀತಾ..?

ಸಾಲಭಾದೆಯಿಂದ ಸತ್ತ ರೈತನ ಕುಟುಂಬಕ್ಕೆ ಪರಿಹಾರದ ಹಣವನ್ನು ನೀಡುವುದನ್ನು ಟೀವಿಯಲ್ಲಿ ನೋಡುತ್ತಿದ್ದ ರೈತ ಮಹಿಳೆಯೊಬ್ಬಳು ತನ್ನ ಗಂಡನನ್ನುದ್ದೇಶಿಸಿ "ಥೂ ಮೂದೇವಿ, ನೀನೂ ಇದೀಯ ದಂಡಕ್ಕೆ, ನೋಡಲ್ಲಿ ಆ ಯಪ್ಪ ಸತ್ತು ಇಡೀ ಸಂಸಾರನ ಸುಕುವಾಗಿ ಇಟ್ಟ. ನೀನು ಇದ್ದೂ ಸತ್ತಂಗಿದೀಯ.." ಎಂದು ಮೂದಲಿಸುತ್ತಿದ್ದಳಂತೆ. ಇಂತಹ ಮಾತನ್ನು ಕೇಳಿದ ಆ ಗಂಡಿನ ಪೌರುಷ ಏನನ್ನು ನಿರ್ಧರಿಸಬಹುದು..? ದಿನಾಲು ಹೆಂಡತಿ ಮಕ್ಕಳೊಡನೆ ಬೈಯಿಸಿಕೊಂಡು ಇರುವುದಕ್ಕಿಂತ ಸಾವು ಅವನಿಗೆ ಸುಖಕರವಾಗಿ ತೋರಲಾರದಾ..? ತಾನು ಇನ್ನು ದುಡಿದು ಸಂಸಾರವನ್ನು ಸುಖವಾಗಿಡಲಾಗದು ಸತ್ತಾದರೂ ಅವರಿಗೆ ನೆಮ್ಮದಿ ನೀಡೋಣ ಎಂದು ನಮ್ಮ ರೈತ ಸ್ವಯಂಕೃತವಾಗಿ ಪರಿಹಾರ ಹಣದ ಆಸೆಯಿಂದ ಆತ್ಮಹತ್ಯೆಗೆ ಶರಣಾದರೆ ಯಾರನ್ನು ಹೊಣೆ ಮಾಡಬಹುದು..? ರೈತನೊಬ್ಬ ಸತ್ತ ತಕ್ಷಣ ಸಾಂತ್ವಾನ ಹೇಳುವ ನೆವದಲ್ಲಿ ಹೋಗಿ ಅವನ ಕುಟುಂಬಕ್ಕೆ ಹಣದ ಚೆಕ್ ಇಟ್ಟು 'ದು:ಖ' ಮರೆಸಲೆತ್ನಿಸುವ ನಮ್ಮ ವ್ಯವಸ್ಥೆಯ ರುವಾರಿಗಳು ಮತ್ತು ಅದನ್ನು ಯಥಾವತ್ತು ತೋರಿಸಿ ಪ್ರಚಾರನೀಡುವ ಮಾಧ್ಯಮಗಳು ಎಲ್ಲರೂ ಹೊಣೆಗಾರರೇ ಅಲ್ಲವೇ..?

ಹಾಗಂತ ಕುಟುಂಬದ ಆಧಾರ ಸ್ಥಂಭವನ್ನೇ ಕಳೆದುಕೊಂಡು ಕಂಗೆಟ್ಟ ಕುಟುಂಬಕ್ಕೆ ಆರ್ಥೀಕ ನೆರವೀಯುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯವಲ್ಲ. ಇದನ್ನೇ ವೈಭವೀಕರಿಸಿ ಪ್ರಚುರ ಪಡಿಸುವುದು ತಪ್ಪು. ನಮ್ಮಲ್ಲಿ ಒಂದು ಮಾತಿದೆ 'ಬಲಗೈಯಿಂದ ಕೊಟ್ಟಿದ್ದು ಎಡಗೈಯಿಗೆ ತಿಳಿಯಬಾರದು' ಹಾಗೆ ನಾವು ಇನ್ನೊಬ್ಬರಿಗೆ ನೆರವೀಯಬೇಕು. ಇಂತಹ ಒಂದು ಪದ್ದತಿಯನ್ನೂ ಹೀಗೆ ಆಕಸ್ಮಿಕವಾಗಿ ಮಡಿದವರ ಕುಟುಂಬಕ್ಕೆ ಸೂಕ್ತ ನೆರವು ನೀಡುವ ಸಂದರ್ಭದಲ್ಲಿ ಅನುಸರಿಸಬೇಕು.

ಅಭೀಷೇಕ್, ವಿಜಯ್ ಪ್ರಕರಣದಿಂದ ಪ್ರೇರಿತವಾಗಿ ಹಣದಾಸೆಗೆ ಯಾವ ತಾಯಿಯಾದರೂ ತನ್ನ ಕರುಳ ಕುಡಿಯನ್ನು ತೇಲಿಬಿಟ್ಟಾಳು ಎಚ್ಚರದಿಂದಿರಬೇಕು. ಒಬ್ಬ ರೈತನ ಸಾವಿನ ನಂತರ ದೊರಕಿದ ಹಣದಿಂದ ಪ್ರೇರಿತನಾಗಿ ಇನ್ನೊಬ್ಬ ಅಂತಹ ಹಣದ ಆಸೆಗೆ ಸಾವಿನೆಡೆಗೆ ನಡೆಯುವುದನ್ನೂ 'ರೈತರ ಆತ್ಮಹತ್ಯೆ'ಯ ಪಟ್ಟಿಯಲ್ಲಿ ಸ್ಥಾನ ಪಡೆಯುವುದನ್ನು ತಪ್ಪಿಸಬೇಕು.ನಮ್ಮ ಸಂವಹನ ಮಾಧ್ಯಮಗಳು ಈ ಎಡೆಗೆ ಸೂಕ್ತ ಗಮನ ಹರಿಸಬೇಕು. ನೀವೇನಂತೀರಾ...?

ಪರಶು..,
renukatanaya@gmail.com

0 comments:

Post a Comment